ಖಡಕ್‍ವಾಸ್ಲಾ ಪುಣೆಯಿಂದ ನೈಋತ್ಯಕ್ಕೆ ೧೭ ಕಿ.ಮೀಗಳ ದೂರದಲ್ಲಿ ಇರುವ ಒಂದು ಹಳ್ಳಿ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ( ) ಇಲ್ಲಿದೆ. ಅಲ್ಲದೆ, ಇದರ ಹತ್ತಿರ ಮುಠಾ ನದಿಗೆ ಸರ್ ಎಂ.ವಿಶ್ವೇಶ್ವರಯ್ಯನವರಿಂದ ನಿರ್ಮಿಸಲ್ಪಟ್ಟ ಅಣೆಕಟ್ಟು ಇದೆ. ಇದರ ಉದ್ದ 4,820`, ಎತ್ತರ 167`. ಇದನ್ನು 1879ರಲ್ಲಿ ಕಟ್ಟಲಾಯಿತು. ಇದರಿಂದ ಇಲ್ಲಿ ಒಂದು ದೊಡ್ಡ ಜಲಾಶಯದ ನಿರ್ಮಾಣವಾಗಿದೆ. ಅಲ್ಲಿಂದ ಎರಡು ಮುಖ್ಯ ಕಾಲುವೆಗಳನ್ನು ತೆಗೆದಿದ್ದಾರೆ. ಮೊದಲನೆಯದು ಹಡಪಸರದಿಂದ ಪಾಟಸ್ ಪರ್ಯಂತ ಮತ್ತು ಎರಡನೆಯದು ಕೋಥರೂಡದಿಂದ ಖಡಕೀ ವರೆಗೆ ಸಾಗುತ್ತವೆ. ಖಡಕವಾಸ್ಲಾ ಕಟ್ಟೆಗೆ ಪಶ್ಚಿಮದಲ್ಲಿ ಘಟ್ಟಪ್ರದೇಶದಲ್ಲಿ ಮಳೆ ಹೇರಳವಾಗಿ ಬೀಳುತ್ತದೆ; ಈ ನೀರು ಉಪಯೋಗವಾಗದೆ ಹರಿದುಹೋಗುತ್ತಿದ್ದುದನ್ನು ತಪ್ಪಿಸಿ ಇದನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಉದ್ದೇಶದಿಂದಲೂ, ಈ ಕಟ್ಟೆಯನ್ನು ಹೆಚ್ಚು ದೃಢಪಡಿಸಲೂ, ಕ್ಷೇತ್ರವನ್ನು ವಿಸ್ತಾರಮಾಡಲೂ ಯೋಚಿಸಿ ಪಶ್ಚಿಮ ದಿಕ್ಕಿನಲ್ಲಿರುವ ಅಂಬಿ ನದಿಗೆ ಪಾನಶೇತ್ ಎಂಬಲ್ಲಿ ಒಂದು ಮಣ್ಣಿನ ಕಟ್ಟೆಯನ್ನು ನಿರ್ಮಿಸಲಾಗುತ್ತಿತ್ತು. ಆ ಕಟ್ಟೆ ಮುಕ್ತಾಯದ ಘಟ್ಟದಲ್ಲಿದ್ದಾಗ ಬಿದ್ದ ಅತಿಶಯ ಮಳೆಯಿಂದಾಗಿ ಅದು ತೇಲಿಹೋಗಿ, ಪ್ರವಾಹದ ರಭಸದಿಂದಾಗಿ ಖಡಕವಾಸ್ಲಾ ಕಟ್ಟೆಯೂ ಒಡೆದು ಹೋಯಿತು. ಈ ದುರ್ಘಟನೆ 1961ರ ಜುಲೈ 12 ರಂದು ಸಂಭವಿಸಿತು. ಇತ್ತೀಚೆಗೆ ಪುನಃ ಪಾನಶೇತ್ ಕಟ್ಟೆಯನ್ನು ಕಟ್ಟಿ ಮುಗಿಸಲಾಗಿದೆಯಲ್ಲದೆ, ಖಡಕವಾಸ್ಲಾ ಕಟ್ಟೆಯ ದುರಸ್ತಿಯೂ ಆಗಿದೆ. ಈ ಕಟ್ಟೆಯ ಒಂದು ಪಕ್ಕದಲ್ಲಿ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನ ಕೇಂದ್ರವಿದೆ. ಇದು ಈ ಕ್ಷೇತ್ರದಲ್ಲಿ ಏಷ್ಯದಲ್ಲೇ ಅತ್ಯಂತ ದೊಡ್ಡದಾದ ಮತ್ತು ಮಹತ್ತ್ವದ ಸಂಶೋಧನಾ ಕೇಂದ್ರ. ಕಟ್ಟೆಯ ಇನ್ನೊಂದು ಪಕ್ಕದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡಮಿ ಎಂಬ ಸೈನಿಕ ಶಿಕ್ಷಣ ಮಹಾವಿದ್ಯಾಲಯವಿದೆ. == ಉಲ್ಲೇಖಗಳು ==